ದೇಶಕಂಡ ಧೀಮಂತ ನಾಯಕಿ ಇಂದಿರಾ ಗಾಂಧಿ

Indira Gandhi-1

“ನನ್ನ ದೇಹದಲ್ಲಿ ರಕ್ತದ ಕೊನೆಯ ಹನಿ ಇರುವವರೆಗೂ ಈ ದೇಶಕ್ಕೆ ಸೇವೆ ಸಲ್ಲಿಸುತ್ತೇನೆ” ಎಂದು ಘೋಷಿಸಿಕೊಂಡ ಭಾರತದ ಮೊದಲ ಮಹಿಳಾ ಪ್ರಧಾನಿ, ಭಾರತ ರತ್ನ ಶ್ರೀಮತಿ ಇಂದಿರಾಗಾಂಧಿ ಇತಿಹಾಸ ಕಂಡ ಉಜ್ವಲ ನಾಯಕಿ. ರಾಜಕೀಯ ಬದ್ಧತೆಗೆ ಒಂದು ಸಜೀವ ಉದಾಹರಣೆ.  ಅವರು ತೆಗೆದುಕೊಂಡ ನಿರ್ಣಯಗಳು ನವಭಾರತದ ಉದಯಕ್ಕೆ ಕಾರಣವಾಗಿ ವಿಶ್ವ ನಕ್ಷೆಯಲ್ಲಿ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಿತು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲುಗೊಂಡು ದೇಶದ ಕನಸನ್ನು ನನಸು ಮಾಡಿ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ನಾಂದಿ ಹಾಡಿದ ಕಾಂಗ್ರೆಸ್, ನಂತರ ಪಕ್ಷವಾಗಿ ರಾಜಕಾರಣವನ್ನು ಆರಂಭಿಸಿ ಈ ದೇಶದ ದೊಡ್ಡ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಇಂಥ ಪರಂಪರೆಯನ್ನು ಮುನ್ನಡೆಸಲು ಸಮರ್ಥ ನಾಯಕತ್ವದ ಕೊರತೆ ಭಾರತಕ್ಕೆ ಯಾವತ್ತೂ ಬರಲಿಲ್ಲ. ಭಾರತದ ಅಭಿವೃದ್ಧಿಯ ಪರ್ವವನ್ನು ಆರಂಭಿಸಿದ ಅತ್ಯಂತ ಪ್ರಭಾವಶಾಲಿ ಪ್ರಧಾನಿ ಇಂದಿರಾ ದೇಶದ ಆಂತರಿಕ ಬೆಳವಣಿಗೆ ಕಟ್ಟಕಡೆಯ ವ್ಯಕ್ತಿಗೆ ಸಿಗಬಹುದಾದ ಪ್ರಾಧಾನ್ಯತೆಯನ್ನು ಎದುರಿಗಿರಿಸಿಕೊಂಡು ಯೋಜನೆಗಳನ್ನು ರೂಪಿಸಿದವರು.

ಭಾರತ ಕೃಷಿಯಾಧಾರಿತ ದೇಶ. ಈ ಕೃಷಿರಂಗದಲ್ಲಿ ಕ್ರಾಂತಿಯೊಂದು ಸಂಭವಿಸದೆ ಇಲ್ಲಿನ ಬದುಕುಗಳು ಹಸನಾಗಲಾರದು ಎಂದು ಭಾವಿಸಿ ಇಂದಿರಾ, ವೈಜ್ಞಾನಿಕ ಮಾದರಿಯನ್ನು ಬಳಸಿ ಬೆಳೆ ಬೆಳೆಯುವ ವಿಧಾನನವನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಿದವರು. 60ರ ದಶಕದಲ್ಲಿ ಸಾಮೂಹಿಕ ಕ್ಷಾಮದಿಂದ ಭಾರತ  ತತ್ತರಗೊಂಡಿತ್ತು. ದೇಶವನ್ನು ಇಂಥ ಸಂಕಷ್ಟದ ಪರಿಸ್ಥಿತಿಯಿಂದ ತಪ್ಪಿಸಲಿಕ್ಕೆ ಕೃಷಿ ಪದ್ಧತಿಯಲ್ಲೇ ಬದಲಾವಣೆ ತರುವುದರ ಬಗ್ಗೆ ಯೋಚಿಸಿ ಹಸಿರು ಕ್ರಾಂತಿಗೆ ಮುಂದಾದರು. ಆಹಾರದ ಸ್ವಾವಲಂಬನೆ ಮುಖ್ಯ ಅದ್ಯತೆಯಾಗಿ ಸ್ವೀಕರಿಸಿ, ಕೃಷಿ ನೀತಿಯನ್ನು ಪ್ರಮುಖ ನೀತಿಯನ್ನಾಗಿ ರೂಪಿಸುವುದರ ಜೊತಗೆ ಗೋಧಿ ಅಕ್ಕಿ, ಜೋಳವನ್ನು ಬೆಳೆಯಲು ಹುರಿದುಂಬಿಸಿದರು. ಕುಬ್ಜತಳಿಯ ಬೀಜಗಳನ್ನು ಇದಕ್ಕಾಗಿ ಬಳಸಲಾಯಿತು. ಇದರಿಂದ  ಸಾಂಪ್ರದಾಯಿಕ ಕೃಷಿಯಲ್ಲಿ ಸಿಗುವ ಇಳುವರಿಗಿಂತ ಹತ್ತುಪಟ್ಟು ಹೆಚ್ಚಳವಾಯಿತು. ರಸಗೊಬ್ಬರ, ಕೀಟನಾಶಕಗಳು, ಗುಣಮಟ್ಟದ ಬೀಜಪೂರೈಕೆ ಮಾಡಿ ಅನ್ನದಾತನ ಮುಖದ ಮಂದಹಾಸಕ್ಕೆ ಕಾರಣರಾದರು.  ದೇಶ ಆಹಾರ ಸಮಸ್ಯೆಯಿಂದ ಮುಕ್ತವಾಯಿತು.

‘ಗರೀಬಿ ಹಟಾವೋ ದೇಶ್ ಬಚಾವೋ’ ಅವರ ಮುಖ್ಯ ಧ್ಯೇಯವಗಿತ್ತು. ಬಡವರ ಉದ್ಧಾರವೇ ದೇಶದ ಸರ್ವತೋಮುಖ ಬೆಳವಣಿಗೆಯ ಮೊದಲ ಮೆಟ್ಟಿಲು ಎಂದು ಭಾವಿಸಿದ ಅವರು ಮನುಷ್ಯನ ಘನತೆಯನ್ನು ಗಮನದಲ್ಲಿರಿಸಿಕೊಂಡು ಯೋಜನೆಯನ್ನು ರೂಪಿಸಿದರು. 5ನೇ ಪಂಚವಾರ್ಷಿಕ ಯೋಜನೆಯಲ್ಲಿ ಪ್ರಮುಖವಾಗಿದ್ದ ಇದು ಸಾಮಾಜಿಕ ನ್ಯಾಯವನ್ನು ಗಣಿಸಿ ತಂದ ಈ ಯೋಜನೆ ಜನಪ್ರಿಯವಾಗಿದ್ದಲ್ಲದೇ ಇಂದಿರಾ ಅವರಿಗೆ ಕೀರ್ತಿ ತಂದುಕೊಟ್ಟಿತು.

ಇನ್ನು ಬ್ಯಾಂಕುಗಳ ರಾಷ್ಟ್ರೀಕರಣ ಮಾಡುವ ಕ್ರಾಂತಿಕಾರಿ ಧೋರಣೆಯನ್ನು ಕೈಗೊಂಡಿದ್ದರಿಂದ ಭಾರತದ ಆರ್ಥಿಕನೀತಿಗೆ ಹೊಸ ಆಯಾಮ ಸಿಕ್ಕಂತಾಯಿತು. ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದ ಬ್ಯಾಂಕುಗಳಿಗೆ ಏಕರೂಪತೆಯನ್ನು ಒದಗಿಸಿಕೊಟ್ಟು, ಪಾರದರ್ಶಕ ವ್ಯವಹಾರಕ್ಕೆ ಎಡೆ ಮಾಡಿಕೊಟ್ಟಿದ್ದಲ್ಲದೇ,  ಸೇವಾವಲಯವನ್ನು ವಿಸ್ತರಿಸಿ ದೇಶವ್ಯಾಪಿ ಹೊಸ ಸಂಚಲನೆಯನ್ನು ತಂದರು. ವ್ಯವಸ್ಥಿತ ಆರ್ಥಿಕ ಅಭಿವೃದ್ಧಿಗೆ ಕಾರಣವಾದ ಬ್ಯಾಂಕುಗಳ ರಾಷ್ಟ್ರೀಕರಣ ದೇಶವ್ಯಾಪೀ ಏಕನೀತಿ ಜಾರಿ ಮಾಡಿ ವಿತ್ತವಲಯದ ಕ್ರಾಂತಿಗೆ ಕಾರಣ ಆದರು. ಇದು ಅವರ ಕಾಲದ ಬಹುದೊಡ್ಡ ಧೀರ ನಿರ್ಣಯವೂ ಆಗಿದೆ.

ಹಾಗೆಯೇ ಜನನಿಯಂತ್ರಣದ ಸಂತಾನಹರಣ ಚಿಕಿತ್ಸೆಗೂ ಯೋಜನೆ ರೂಪಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತ್ಯೇಕ ಕೇಂದ್ರಗಳನ್ನು ನಿರ್ಮಿಸಿ, ಜನಸಂಖ್ಯಾಸ್ಪೋಟ ಸಮಸ್ಯೆಗೆ ಉತ್ತರವನ್ನು ಕಂಡುಕೊಳ್ಳಲಾಯಿತು. ಭಾರತ ಇಂದು ಅಭಿವೃದ್ಧಿಯ ತೊಟ್ಟಿಲಾಗಿದೆ. ಇದನ್ನು ಆಗುಮಾಡಿದ್ದು ಇಂದಿರಾ ಅವರ ದೂರದರ್ಶಿತ್ವ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಭಾರತವನ್ನು ಆಧುನಿಕಗೊಳಿಸಿ ಅಂತಾರಾಷ್ಟ್ರೀಯ ಮಟ್ತಕ್ಕೆ ಕೊಂಡೊಯ್ದ ಮೊದಲ ಮಹಿಳಾ ಪ್ರಧಾನಿ, ಉಕ್ಕಿನ ಮಹಿಳೆ, ಘನತೆವೆತ್ತ ಭಾರತರತ್ನ ಶ್ರೀಮತಿ ಇಂದಿರಾ ಅವರನ್ನು, ಅವರ 100ನೇ ಹುಟ್ಟುಹಬ್ಬದಂದು ನಾಡು ಗೌರವದಿಂದ ಸ್ಮರಿಸುತ್ತದೆ.

Leave a comment