ದೇಶದ ಹಲವಾರು ರಾಜ್ಯಗಳಲ್ಲಿ ಈ ಬಾರಿ ಬರ ಪರಿಸ್ಥಿತಿಯ ಬಿಸಿ ಉಂಟಾಗಿದೆ. ಕೆಲವೆಡೆ ಅಲ್ಲಿನ ಸರ್ಕಾರಗಳು ಬರ ನಿರ್ವಹಣೆಗೆ ಒದ್ದಾಡುತ್ತಿದ್ದರೆ, ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯೋಜನಾಬದ್ಧ ನಡೆಯೊಂದಿಗೆ ಬರದ ಕಾವನ್ನು ಕಡಿಮೆ ಮಾಡಿದೆ, ಸಮರ್ಥವಾಗಿ ಬರ ನಿರ್ವಹಣೆ ಮಾಡುತ್ತಿದೆ.
ಬರದ ಸೂಚನೆ ಕಂಡುಬರುತ್ತಿದ್ದಂತೆ ಸಿದ್ದರಾಮಯ್ಯನವರು ತಕ್ಷಣ ಆಯಾ ಪ್ರದೇಶಗಳ ಅಧಿಕಾರಿಗಳಿಗೆ ಸಮಗ್ರ ವರದಿ ಸಿದ್ಧಪಡಿಸುವಂತೆ ಸೂಚಿಸಿದರು. ಏಪ್ರಿಲ್ 3ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಸಿ.ಇ.ಒಗಳು ಮತ್ತು ಹಿರಿಯ ಅಧಿಕಾರಿಗಳೊಡನೆ ಸಂವಾದ ನಡೆಸಿ ಬರಪೀಡಿತ ಪ್ರದೇಶಗಳ ವಸ್ತುಸ್ಥಿತಿಯನ್ನು ತಿಳಿದುಕೊಂಡರು. ಆ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ ಮುಂದಿನ ಹೆಜ್ಜೆಯಿಡಲು ಅಣಿಯಾದರು.
ಏಪ್ರಿಲ್ 15ನೇ ತಾರೀಖು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬರಪೀಡಿತ ಪ್ರದೇಶಗಳ ಜನರ ಕಷ್ಟಗಳನ್ನು ಅರಿಯಲು ಬೀದರ್, ಕಲಬುರ್ಗಿ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿದರು. ಏಪ್ರಿಲ್ 18ರಂದು ವಿಜಯನಗರ, ಬಾಗಲಕೋಟೆ ಪ್ರವಾಸ ನಡೆಸಿ ವಸ್ತುಸ್ಥಿತಿಯನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಬರ ಪೀಡಿತ ಪ್ರದೇಶಗಳಲ್ಲಿ ಜನರಿಗೆ ಯಾವುದೇ ತೊಂದರೆ ಆಗದಂತೆ, ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಾನುವಾರುಗಳಿಗೂ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಮೇವು ಬ್ಯಾಂಕ್ ಮತ್ತು ಗೋಶಾಲೆಗಳನ್ನು ಅವಶ್ಯವಿರುವೆಡೆಯಲ್ಲೆಲ್ಲ ಸ್ಥಾಪಿಸಲು ಮುಖ್ಯಮಂತ್ರಿಗಳು ಆದೇಶ ನೀಡಿದರು. ಆಹಾರ, ನೀರು, ಔಷಧ, ನೆರಳಿಗೆ ಯಾವುದೇ ರೀತಿಯ ತತ್ವಾರ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಖಡಕ್ ಆಗಿ ಎಚ್ಚರಿಸಿದರು.
ಆ ನಂತರ ಏಪ್ರಿಲ್ 25ರಂದು ಎರಡನೇ ಹಂತದ ಬರ ಪರಿಶೀಲನಾ ಪ್ರವಾಸ ಹಮ್ಮಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲಿಗೆ ಬೆಳಗಾವಿ ಜಿಲ್ಲೆಯ ಪರಿಸ್ಥಿತಿಯನ್ನು ಗಮನಿಸಿದರು. ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿಯೂ ಪರಿಶೀಲನೆ ನಡೆಸಿ ಕುಡಿಯುವ ನೀರು, ಮೇವು ಬ್ಯಾಂಕ್, ಗೋಶಾಲೆಗಳಿಗೆ ಕೊರತೆಯಾಗದಂತೆ ನೋಡಿಕೊಳ್ಳಲು ತಿಳಿಸಿದರು. ಇದರ ನಡುವೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ವಾರಣ ಜಲಾಶಯದಿಂದ ಕೃಷ್ಣಾ ನದಿಗೆ 1 ಟಿಎಂಸಿ ನೀರು ಬಿಡುವಂತೆ ಮಾಡಿದರು. ಏಪ್ರಿಲ್ 27ರಂದು ಗದಗ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಸಿದ್ದರಾಮಯ್ಯನವರು ಪ್ರವಾಸ ನಡೆಸಿದರು.
ಇದೀಗ ಮೇ 5ರಂದು ಚಿಕ್ಕಬಳ್ಳಾಪುರದಲ್ಲಿ ಬರ ಪರಿಸ್ಥಿತಿಯನ್ನು ವೀಕ್ಷಿಸಿರುವ ಮುಖ್ಯಮಂತ್ರಿಗಳು ಚಿತ್ರದುರ್ಗವನ್ನೂ ಸಮಗ್ರವಾಗಿ ಪರಿಶೀಲಿಸಿದ್ದಾರೆ. ಯಾವುದೇ ಕೃತ್ರಿಮತೆ-ನಾಟಕೀಯತೆಯನ್ನು ಅರಿಯದ ನಮ್ಮ ಮುಖ್ಯಮಂತ್ರಿಗಳು ಹೋದೆಡೆಯಲ್ಲ ಜನರ ಬಳಿ ಸಾರಿ ಅವರ ಕಷ್ಟಕ್ಕೆ ಕಿವಿಯಾಗಿದ್ದಾರೆ. ನಿಂತ ನಿಲುವಿನಲ್ಲೇ ಸಮಸ್ಯೆಗಳನ್ನು ಬಗೆಹರಿಸಿದ ಅದೆಷ್ಟೋ ಉದಾಹರಣೆಗಳು ಕಣ್ಣ ಮುಂದೆಯೇ ಇದೆ. ಒಟ್ಟಿನಲ್ಲಿ ಬರ ನಿರ್ವಹಣೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮರ್ಥವಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ.